ಶನಿವಾರ, ಜುಲೈ 6, 2013

ಶ್ರೇಷ್ಟ ಜೀವಿ!

ಹಸಿದಾಗ ಮಾತ್ರ ಬೇಟೆಗೆ ಹೊರಡುವ
ಕಾಡು ಪ್ರಾಣಿಗಳು ಕಡುಕ್ರೂರಿಗಳು

ತುತ್ತು ರೊಟ್ಟಿಗಾಗಿ ಮತ್ತು ಅಲ್ಪ ಮಿಥುನಕ್ಕಾಗಿ
ಕಚ್ಚಾಡುವ ನಾಯಿಗಳದೆಂಥಾ ನಾಯಿಬುದ್ಧಿ?

ಬೀಡಾಡಿ ಗೂಳಿಗಳಿಗೋ
ಕುಟುಂಬ ಯೋಜನೆಯ ಗಂಧಗಾಳಿಯೂ ಇದ್ದಂತಿಲ್ಲ

ಹುಟ್ಟಾ ಗಲೀಜಿನ ಹಂದಿಗಳನ್ನು
ರುಚಿಯಿಂದ ಮಾತ್ರ ಮೆಚ್ಚಬಹುದು

ಅಷ್ಟೊಂದು ಅಕ್ಕರೆಯಿಂದ ಸಾಕಿದ ಕೋಳಿಗಳನ್ನು
ಮೋಸದಿಂದ ಕದ್ದೊಯ್ದು ಬಿರಿಯಾನಿ ಮಾಡದೇ ತಿನ್ನುವ
ನರಿಗಳದು ಠಕ್ಕು ಜೀವನ

ಚುನಾವಣೆಯೇ ಬೇಕಿಲ್ಲದೆ ಪ್ರಚಾರಕ್ಕೆ ಹೊರಡುವ ಕಾಗೆಗಳು
ಬಲು ಕರ್ಕಶ

ಕೈಕಾಲಿದ್ದು ಕಾಡನ್ನು ಕಡಿದು ವನಮಹೋತ್ಸವ
ಮಾಡದ ನಿಷ್ಪ್ರಯೋಜಕ ಜೀವಿಗಳಿಗೆ ಮಂಗಗಳೆಂದು ಕರೆಯಬಹುದು
ಗಂಗೆಯಂತಾ ನದಿಗಳ ನೀರಲ್ಲಿದ್ದೂ ಬದುಕಿ ಉಳಿದ ಮೀನುಗಳಿದ್ದರೆ
ನಮ್ಮ ಹೊಟ್ಟೆಯಲ್ಲಾದರೂ ಸಾಯಲಿ!

ಪ್ರಪಂಚವನ್ನು ಇದ್ದಂತೆ ಇರಬಿಟ್ಟು ತಾನು
ಬಣ್ಣ ಬದಲಿಸುವ ಜೀವೆಯೆ ಗೋಸುಂಬೆ!

ಮನುಷ್ಯನೋ ಇವುಗಳನ್ನೆಲ್ಲ ಮೀರಿದ ಶ್ರೇಷ್ಟ ಜೀವಿ!