ಗುರುವಾರ, ಜುಲೈ 14, 2016

ಜೀವನಯಜ್ಞ


ಉತ್ಕ್ರಮಣಗೈಯುತಿದೆ ಅಗ್ನಿದಂಡ
ಬುಡಕಿಷ್ಟು ಉರಿಯ ನೀಡು
ನೋವಿಂದ ನೆಗೆದದಕೆ ಊರ್ಧ್ವಗತಿಯು 
ಉದರದಲಿ ಕನಸಗೂಡು
ಕಟ್ಟಿಕೊಂಡಿದೆ ನಾಳೆಗಳ ಬಗಲಿನಲ್ಲಿ
ನಿನ್ನೆಗಳ ತುಳಿವ ಜಾಡು
ಇಂದು ಎಂಬುದು ಉರಿವ ಒಡಲ ಬೆಂಕಿ
ಗುರಿಯೊಂದೆ ಬೆಳಕನಾಡು
ಸುಡುವ ಬದುಕಲ್ಲಿ ನಿತ್ಯಯಜ್ಞ
ಉಸಿರುಗಳ ಸ್ವಾಹ ಮಂತ್ರ
ತನ್ನ ತಾ ಕಳೆದು ಬೆಳಗಿಕೊಳುವ
ವ್ಯಾಪಾರ ಶಿವನ ತಂತ್ರ