ಗುರುವಾರ, ಸೆಪ್ಟೆಂಬರ್ 2, 2010

ಧೇನು ಪುರಾಣವು


ಋಷಿಯೊಬ್ಬ ಲೋಕಕ್ಕೆ ಕರುಳಿಂದೆ ಒರಲಿದ

ಖುಷಿಯಿಂದ ಕರುಕರೆಗೆ ಮರು ಗೋವು ಗೆಲೆವಂತೆ
ನಶೆಗೊಂಡರಾ ಪಂಡಿತರನೇಕರನೇಕರಲ್ಲಿ ಹಸಿಹುಲ್ಲನಿತ್ತು
ಹುಸಿಪ್ರೀತಿಯಂ ತೋರಿ ಕರೆದರಾ ಸವಿಕ್ಷೀರವನು ಬರಿದೆ ಬಾಯಾರಿ

ಪಾನ ಪಂಡಿತನೊಬ್ಬ ಹಸಿಹಾಲಹೀರಿದನ
ವನ ಮೀರಿಸಲೊಬ್ಬ ಕುದಿಸಿ ಕೆನೆತೆಗೆದ
ವನವಸ್ತು ಸೇರಿಸಿದ ಬಹುರುಚಿಯ ತೋರಿಸಿದ
ಜನಕೆ ಬಡಿಸುತ ಹಿಗ್ಗಿ ಬಾಯಿ ಚಪ್ಪರಿಸಿದ

ಪಾಯಸವ ಮಾಡಿದರಾಯಾಸ ಮೀರಿದರವರು
ಸಾಯದೇ ಸ್ವರ್ಗವನು ಕಂಡೆವೆಂದುಲಿದರು
ಮಾಯಕ್ಕೆ ಮೇಲೊಂದು ಕರಿಕಂಬಳಿಯ ಹೊದ್ದರು
ಕಾಯಕ್ಕೆ ತಕ್ಕಂತೆ ನೆಲಬಳಸಿ ಗೊರೆದರು

ಕಾಲಕಾಯುತಲಿದ್ದ ಜಗದೇಕ ಪಾಮರನು
ಬಾಲಕನ ಮನದವನು ಲೀಲೆಯಲಿ ಹನುಮನು
ಕಾಲಸದ್ದಿಲ್ಲದೆ ಕೊಟ್ಟಿಗೆಗೆ ಬಂದನು
ಖೂಳ ಪಂಡಿತರನೆಲ್ಲ ಮನಸಾರೆ ಬೈದನು

ಕುಣಿಕೆಯಂ ಬಿಡಿಸಿದಂ ಚೆಂಗರುವ ಪುಟಿಸಿದಂ
ಹಣಕಿ ತಾ ನೋಡಿದಂ ಹಸಿದು ಹರಿದಿದ್ದ ಜೊಲ್ಲನುಂ
ಚಣಚಣಕು ಕುಣಿಯುತ್ತ ಕಣಕಣವ ಸವಿಯುತ್ತ
ಮೇಣ್ ಬಾಲವೆತ್ತುತ್ತ ಕುಣಿವ ಕರುವಂ

ಕಣ್ಣಲ್ಲೆ ನಲಿಯುತ್ತ ಮೈಎಲ್ಲ ನೆಕ್ಕುತ್ತ
ಬೆಣ್ಣೆಯಂತಿಹ ಕರುವ ಕಲೆತ ಹಸುವಂ
ಕಣ್ಣ ತುಂಬಿಸಿ ತಾನು ಪಾಮರಂ ಹಿರಿಹಿಗ್ಗಿ
ಚಿಣ್ಣನಂತಲೆ ಸವಿದನಾ ಋಷಿಸಹಜ ಕಾವ್ಯಮಂ