ಶುಕ್ರವಾರ, ಸೆಪ್ಟೆಂಬರ್ 4, 2015

ದೇವರೆ,



ನೀನು ಬಹುಕಾಲ
ಮಳೆಗಾಳಿ ಬಿಸಿಲು
ಗುಡುಗು ಸೀತೋಷ್ಣಪಿತ್ಥಾದಿಗಳಿಂದ
ನರಳದಿರಲೆಂದು ನಿನ್ನ
ಕಲ್ಲಿನಲಿ ಕಡೆದಿಟ್ಟೆ

ಮಾನವ ಕೋಟಿಯ
ಪ್ರಾರ್ಥನೆಗಳೆಲ್ಲಾ ತುಂಬಲು
ಗೆರಸಿಯ ಕಿವಿಕೊಟ್ಟೆ

ನಮ್ಮಯ ಪಾಪ ಪುಣ್ಯಗಳ
ತೇಗಲು ಘನೋದರವ ಕೊಟ್ಟೆ

ಬರಿಯ ಗೋಳುಗಳ
ಕತೆಬೇಡೆಂದು ಬಗೆಬಗೆ
ಸ್ತುತಿಗಳ ಹಾಡುತ ಕುಳಿತುಬಿಟ್ಟೆ

ಕತ್ತಲಾಗಲು ನಿನ್ನ ನೋಡಲು
ದೀಪವ ಹಚ್ಚಿಟ್ಟೆ

ಸ್ತುತಿಗಳ ಮತ್ತಲಿ
ಮೈಮರೆಯದಂತೆ
ಶಂಖ ಜಾಗಟೆಗಳ
ದಿನ ಬಡಿದಿಟ್ಟೆ

ನಿನ್ನ ಪ್ರೀತಿಸುವ
ಪರಿಯನು ತಿಳಿಯದೆ
ಪಂಚೋಪಚಾರ ಪೂಜೆಗಳ
ಮಡುತ ಕುಳಿತುಬಿಟ್ಟೆ

ನೀನೋ
ನಿರಾಕಾರ
ನಿರ್ಗುಣ
ನಿರ್ವಿಕಲ್ಪ
ನಿರ್ವಿಕಾರ
ನಿರುದ್ದೇಶಕ
ನಿರುದ್ಯೋಗಿ
ನಿರ್ದೇಶಕನೆಂಬುದ
ತೋರುತ ಕುಳಿತುಬಿಟ್ಟೆ

1 ಕಾಮೆಂಟ್‌:

sunaath ಹೇಳಿದರು...

ನಿರುದ್ಯೋಗಿ ನಿರ್ದೇಶಕ! ವಾಹ್!